ಬಳ್ಳಾರಿ,ಜ.14(ಕರ್ನಾಟಕ ವಾರ್ತೆ):

12 ನೇ ಶತಮಾನದ ವಚನ ಸಾಹಿತ್ಯದ ವಚನಕಾರರಲ್ಲಿ ಒಬ್ಬರಾದ ಶಿವಯೋಗಿ ಶರಣ ಸಿದ್ದರಾಮೇಶ್ವರರ ಕಾಯಕಯೋಗಿ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ 853ನೇ ಜಯಂತಿ ಕಾರ್ಯಕ್ರಮವನ್ನು ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮೇಶ್ವರರ ತತ್ವವು ಮನುಕುಲದ ಸೇವೆ, ಶಿವಯೋಗದ ಮಾರ್ಗವಾಗಿತ್ತು. ವಚನ ಸಾಹಿತ್ಯವನ್ನು ವಿನಾಶದಿಂದ ಪಾರು ಮಾಡುವಲ್ಲಿ ಸಿದ್ದರಾಮೇಶ್ವರರು ಕೂಡ ಒಬ್ಬರಾಗಿದ್ದರು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಮಾತನಾಡಿ, ಸಿದ್ದರಾಮೇಶ್ವರರು ಜಾತಿ ಮತ್ತು ಲಿಂಗ ತಾರತಮ್ಯದ ಕುರುಡು ಸಂಪ್ರದಾಯಗಳನ್ನು ತಿರಸ್ಕರಿಸಿದ್ದರು. ವೈಯಕ್ತಿಕ ಅನುಭವದ ಮೂಲಕ ಸಾಕ್ಷರತೆಗೆ ಒತ್ತು ನೀಡಿದ್ದರು. ಸಮ ಸಮಾಜ ಕಟ್ಟುವಲ್ಲಿ ಕನಸು ಕಂಡಿದ್ದವರು ಎಂದು ಹೇಳಿದರು.
ಸಿದ್ದರಾಮೇಶ್ವರರು 12 ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಯರಂತಹ ವಚನ ಸಾಹಿತ್ಯಕಾರರ ಸಾಲಿನಲ್ಲಿ ಇವರು ಕೂಡ ಪ್ರಬುದ್ಧ ವಚನಕಾರರಾಗಿದ್ದರು ಎಂದು ತಿಳಿಸಿದರು.
ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಗಾದೆಪ್ಪ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಿದ್ದರಾಮೇಶ್ವರ ಅವರು ಕ್ರಿ.ಶ 12ನೇ ಶತಮಾನದ ಸುಪ್ರಸಿದ್ದ ಶರಣರ ಶರಣರ ಪರಂಪರೆಯಲ್ಲಿ ಗುರುತಿಸಿಕೊಂಡವರು. ತನ್ನ ಸ್ವಂತ ಕಾಯಕದ ಮೂಲಕ ಅಪ್ರತಿಮ ಶರಣನಾಗಿ ರೂಪಗೊಂಡವನು ಎಂದರು.
ಸಿದ್ದರಾಮೇಶ್ವರರು ಸೊನ್ನಲಿಗೆ ಎಂಬ ಪುಟ್ಟ ಹಳ್ಳಿಯಲ್ಲಿ (ಮಹಾರಾಷ್ಟ್ರದ ಸೊಲ್ಲಾಪುರ) ಜನಿಸಿದವರು. ಅವರ ತಂದೆ ಮುದ್ದುಗೌಡ, ತಾಯಿ ಸುಗ್ಗವ್ವ. ಸಿದ್ಧರಾಮೇಶ್ವರರು ವಚನಗಳನ್ನು ರಚಿಸಿರುವುದು ಮಾತ್ರವಲ್ಲದೆ, ವಚನ ಸಂರಕ್ಷಣೆಯೂ ಮಾಡಿದ್ದಾರೆ. ಕೆರೆ, ಕಟ್ಟೆ ಕಟ್ಟಿಸಿ ಜನೋಪಯೋಗಿ ಕಾರ್ಯ ಕೈಗೊಂಡರು. ಶರಣತತ್ವದ ಪರಿಪಾಲಕರಾಗಿದ್ದರು ಎಂದರು.


